ನೀನಿರ ಬೇಕು ನನ್ನ ಬಳಿ
ನಾನಿರ ಬೇಕು
ನಿನ್ನ ತೋಳ್ತೆಕ್ಕೆಯಲಿ
ಪ್ರೀತಿ ಪ್ರೇಮಕ್ಕಾಗಿ ಅಲ್ಲ
ಸರಸಕ್ಕಂತು ಅಲ್ಲವೇ ಅಲ್ಲ
ನನ್ನ ನಿನ್ನ ಉಸಿರುಗಳು
ಮೇಳೈಸಲು
ನಿನ್ನ ಬೆರಳುಗಳು
ನನ್ಮುಂಗುರುಳಿನಲಿ
ಮೆರವಣಿಗೆಯಾಗಲು
ನಿನ್ನ ಹೃದಯ ಬಡಿತವ
ನಾ ಅರಿಯಲು
ನಿನ್ನ ಬಗೆಗಿನ
ನನ್ನ ತುಡಿತವ
ನೀ ತಿಳಿಯಲು
ಒಬ್ಬರಿಗೊಬ್ಬರು
ನಾವಿಬ್ಬರೂ ಎಂದು
ನಾವೀರರ್ವರೂ
ಎಂಬ ಬಿಸುಪ
ಅನುಭವಿಸಲು
ಪ್ರೇಮ ಕಾಮಕ್ಕೂ
ಮೀರಿದ ಮಧುರಾತಿ
ಮಧುರ
ಅನುಭೂತಿಯಾಗಲು
ನಾನೇ ನೀನಾಗಲು
ನೀನು ನಾನೇ
ಆಗಲು
ಆಗಿರಲು
ಆಗುತ್ತಲೇ ಇರಲು
ಜಂಗಮವಾಗಲು
ಸ್ಥಾವರವಾಗಲು
ಒಬ್ಬರಲ್ಲಿ
ಮತ್ತೊಬ್ಬರು
ಐಕ್ಯವಾಗಲು
ನಾವಿರಬೇಕು
ನಮ್ಮಿಬ್ಬರ
ಜೊತೆಯಲ್ಲಿ
ಸಂಗದಲಿ
ನಿರಂತರ
ನಿರಾಕಾರ
ಅನವರತ.
ಜ್ಯೋತಿ ಕುಮಾರ್.ಎಂ(ಜೆ.ಕೆ.).
ಪರಿಚಯ.
ಜ್ಯೋತಿ ಕುಮಾರ್.ಎಂ(ಜೆ.ಕೆ.),ಇವರು ಓದಿದ್ದು,ಎಮ್,ಎಸ್ಸಿ.ಎಮ್,ಇಡಿ.ವೃತ್ತಿಯಲ್ಲಿ ಹೈಸ್ಕೂಲ್ ಗಣಿತ ಮೇಷ್ಟ್ರು.ಮೂಲತಃ ದಾವಣಗೆರೆ ತಾಲ್ಲೂಕು ಹಾಗೂ ಜಿಲ್ಲೆಯ ಮುದಹದಡಿ ಗ್ರಾಮದವರು.ಸದ್ಯ ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕಿನ ಗುತ್ತಿದುರ್ಗದಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.ಇವರು ಹವ್ಯಾಸಿ ಬರಹಗಾರರಾಗಿದ್ದು,ಪ್ರಸ್ತುತ ಇವರ ಬರಹಗಳು ನಾಡಿನ ಹೆಸರಾಂತ ಪತ್ರಿಕೆಗಳಾದ ಹಾಯ್ ಬೆಂಗಳೂರು,ಮಂಗಳ,ನಿಮ್ಮೆಲ್ಲರ ಮಾನಸ,ಜೀವನಾಡಿ ಪತ್ರಿಕೆ,ಬುಕ್ ಬ್ರಹ್ಮ,ಸಂಗಾತಿ,ಕೆಂಡಸಂಪಿಗೆ,ಮಿಂಚುಳ್ಳಿ,ಪಂಜು ಮ್ಯಾಗಝೀನ್,ಪ್ರತಿ ಲಿಪಿ,ಮಾಮ್ಸ್ ಪ್ರೆಸ್ಸೋ ಇವುಗಳಲ್ಲಿ ಪ್ರಕಟವಾಗಿವೆ.